Wednesday, June 24, 2009

ಕೆಲವು ಪ್ರಶ್ನೆಗಳು

ಬಹುಶ: ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಈ ರೀತಿಯ ತಿರುವುಗಳೂ ಬರುತ್ತವೇನೋ. ’ಮುಂದೇನು’ ಎನ್ನುವ ಪ್ರಶ್ನೆ ಒಮ್ಮೆಲೆ ಕಾಡತೊಡಗುತ್ತದೆ. ಈ "ಮುಂದೇನು" ಎನ್ನುವುದು ಕೇವಲ ಒಂದು ಪ್ರಶ್ನೆಯಾಗಿರುವುದಿಲ್ಲ. ಹಲವು ಪ್ರಶ್ನೆಗಳನ್ನು ಹೆಣೆದು ಕಟ್ಟಿದ ಒಂದು ಮಾಲೆಯಂತಿರುತ್ತದೇನೋ. ಈ "ಮುಂದೇನು" ಅನ್ನುವುದರಲ್ಲಿ "ನಾನು ಯಾರು?", "ನಾನೇನು ಮಾಡುತ್ತಿರುವೆ?", "ಯಾಕೆ ಹೀಗಾಗುತ್ತಿದೆ?", "ನಾನು ಎತ್ತ ಕಡೆ ಹೊರಟಿದ್ದೆ?", "ಈಗ ಯಾವ ದಿಕ್ಕಿನಲ್ಲಿದ್ದೇನೆ?" ಹೀಗೆ ಹಲವಾರು ಪ್ರಶ್ನೆಗಳು ಅಡಕವಾಗಿರಬಹುದು.

ಇಂದು ಯಾಕೋ ಒಮ್ಮೆಲೆ ಹಲವಾರು ಪ್ರಶ್ನೆಗಳು ನನ್ನನ್ನು ಕಾಡಹತ್ತಿವೆ. ಎಲ್ಲ ಪ್ರಶ್ನೆಗಳು ಒಮ್ಮೆಲೆ ಕಾಡಹತ್ತಿವೆಯೇ? ಅಥವಾ ಮನಸ್ಸಿನ ಯಾವುದೋ ಮೂಲೆಯಲ್ಲಡಗಿದ್ದ, ಹೊರ ಬರಲು ತವಕಿಸುತ್ತಿದ್ದ ಪ್ರಶ್ನೆಗಳಿಗೆ ಇಂದು ಒಂದು outlet ಸಿಕ್ಕಿದೆಯೇ? ಕಾಡುತ್ತಿರುವ ಅಸಂಖ್ಯಾತ ಪ್ರಶ್ನೆಗಳಲ್ಲಿ ಈ ಪ್ರಶ್ನೆಗಳೂ ಸೇರಿರಬಹುದು.

ಸಂಪದ.ನೆಟ್ ನ ಒಂದು ಲೇಖನದಲ್ಲಿ ಈ ಸಾಲನ್ನು ನೋಡಿದೆ. "ವಿಷಯ ಭೋಗಗಳನ್ನು ಅತಿಯಾಗಿ ಹಚ್ಚಿಕೊಳ್ಳದೆ, ಬ್ರಹ್ಮನ ಅರಿವಿಗಾಗಿ ಹೋರಾಡಿದರೆ ಶಾಶ್ವತ ಸಂತೋಷ ಸಿಗುತ್ತದೆ" ಎಂದು ಬರೆಯಲಾಗಿತ್ತು. ಬ್ರಹ್ಮನ ಅರಿವಿಗಾಗಿ ಹೋರಾಡುವುದು ಏತಕ್ಕೆ? ಹೋರಾಟದಲ್ಲಿ ಯಾವ ತೆರನ ಸಂತೋಷವಿರುತ್ತೆ? ಅಷ್ಟಾಗ್ಯೂ "ಸಂತೋಷ" ಎಂದರೇನು? "ದು:ಖ" ಎಂದರೇನು? ಈ ಎರಡೂ ಶಬ್ದಗಳು subjective ಆಗಿರುತ್ತವಲ್ಲವೇ? ಮೊನ್ನೆ ಪಾಕಿಸ್ತಾನ ವಿಶ್ವ ಕಪ್ ಗೆದ್ದಾಗ, ಆ ದೇಶದವರಿಗೆ ಆದದ್ದು ಸಂತೋಷ. ಆದರೆ ಅದೇ ಭಾವನೆ ಸೋತ ಶ್ರೀ ಲಂಕೆಯವರಿಗೆ ಇರಲು ಸಾಧ್ಯವಿಲ್ಲ. ಅವರಿಗೆ ಸಿಕ್ಕಿದ್ದು ದು:ಖ. ಹಾಗಾದರೆ "ಸಂತೋಷ" ಹಾಗೂ "ದು:ಖ" universal truths ಆಗಲು ಸಾಧ್ಯವಿಲ್ಲ ಎಂದಾಯಿತೆ? ಇದೇ ತರ್ಕ ಬಳಸಿದರೆ, ಯಾವುದೋ ಒಂದು ವಿಷಯದಲ್ಲಿ ನನಗೆ ಸಿಕ್ಕ ಸಂತೋಷ, ಮತ್ತೊಬ್ಬನ ದು:ಖಕ್ಕೆ ಕಾರಣವಾಗಿರಬಹುದಲ್ಲವೆ? ಹಾಗಾದರೆ ಮತ್ತೊಬ್ಬನ ನೋವಿಗೆ ಕಾರಣವಾದ ನನ್ನ ಸಂತೋಷ, ನಿಜವಾದ ಸಂತೋಷವೆ? ಹಿಂದೆ ಒಂದು ಲೇಖನದಲ್ಲಿ ಓದಿದ್ದೆ. Darkness is not an entity, it is the absence of light ಎಂದು. ಹಾಗಿದ್ದರೆ "ದು:ಖ" ಎನ್ನುವುದು, "ಸಂತೋಷ" ದ absence ಹಾಗೂ vice versa ಎನ್ನಬಹುದೇ? ಇದು ಅತ್ಯಂತ ಅತಾರ್ಕಿಕ ವಾದ ಎಂದು ನನಗನಿಸುತ್ತದೆ. ಅಥವಾ ಅತ್ಯಂತ nonsensical ವಾದ ಅನ್ನಬಹುದು.

ಒಳ್ಳೆಯತನ ಎಂದರೇನು? ದುಷ್ಟತನ ಎಂದರೇನು? ಇವು ನನ್ನನ್ನು ಕಾಡುತ್ತಿರುವ ಇನ್ನೆರಡು ಪ್ರಶ್ನೆಗಳು. ಆರ್ಥಿಕವಾಗಿ ಅತ್ಯಂತ ದು:ಸ್ಥಿತಿಯಲ್ಲಿದ್ದಾಗ ಒಬ್ಬ ಆತ್ಮೀಯರಿಂದ ಹತ್ತು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದ್ದೆ. ಆರು ವರ್ಷಗಳ ಹಿಂದಿನ ಮಾತಿದು. ನಂತರ ಚೂರು ಪರಿಸ್ಥಿತಿ ಸುಧಾರಿಸಿತು. ಕಷ್ಟ ಪಟ್ಟೆ. ಸಾಕಷ್ಟು ಕೆಲಸ ಮಾಡಿದೆ. ಹಣವನ್ನೂ ಗಳಿಸಿದೆ. ಶ್ರಮದಿಂದ ಉಳಿಸಿದ ಹಣವನ್ನು ಶೇರು ಮಾರುಕಟ್ಟೆಯಲ್ಲಿ ತೊಡಗಿಸಿದೆ. ಆರೇ ತಿಂಗಳಲ್ಲಿ ಎಲ್ಲವನ್ನೂ ಕಳೆದುಕೊಂಡೆ. ಆದರೆ ಈ ಆರು ವರ್ಷಗಳಲ್ಲಿ, ಕೈ ತುಂಬಾ ಹಣ ಇದ್ದ ಸಮಯದಲ್ಲೂ ಕೂಡ, ಪಡೆದುಕೊಂಡಿದ್ದ ಸಾಲವನ್ನು ಮರಳಿಸಬೇಕೆಂಬುದು ಯಾಕೋ ಹೊಳೆಯಲೇ ಇಲ್ಲ. ಹತ್ತು ಸಾವಿರ ರೂಪಾಯಿಗಳನ್ನು ಮರಳಿಸುವುದು ದೊಡ್ಡ ವಿಷಯವೂ ಆಗಿರಲಿಲ್ಲ. ಆದರೆ ಪಡೆದುಕೊಂಡ ಆ ಸಾಲದ ಬಗ್ಗೆ ಒಮ್ಮೆಯೂ ಅವರ ಜೊತೆ ನಾನು ಮಾತಾಡಲಿಲ್ಲ. ಎಂತಹ ದುಷ್ಟತನ ಅಲ್ಲವೆ? ಕೃತಘ್ನತೆ ಅಲ್ಲವೆ?

ನಾಳೆ, ಇಲ್ಲ ಇನ್ನೈದು ವರ್ಷಗಳ ನಂತರವಾದರೂ ಆ ಸಾಲವನ್ನು ತೀರಿಸಬಹುದು. ಆದರೆ ಋಣವನ್ನು ತೀರಿಸಲಿಕ್ಕೆ ಸಾಧ್ಯವೆ? ಇಷ್ಟು ದಿನ ಯಾಕೆ ಸಾಲದ ಬಗ್ಗೆ ಅವರೊಂದಿಗೆ ಮಾತಾಡಲಿಲ್ಲ ಎನ್ನುವುದಕ್ಕೆ ನನ್ನ ಬಳಿ ನನ್ನದೇ ಆದ ನೂರಾರು justifications ಇರಬಹುದು. ಇವೆ. ಯಾರಾದರೂ ಈ ವಿಷಯದಲ್ಲಿ ಪ್ರಶ್ನೆ ಕೇಳಿದರೆ, ಅವರಿಗೆ ನನ್ನ ಎಲ್ಲ justifications ಗಳನ್ನು ತಿಳಿಸಿ, "ದುಷ್ಟ" ಎಂಬ ಹಣೆಪಟ್ಟಿ ತಾಗದಂತೆ ಬಚಾವಾಗಬಹುದೇನೋ ನಾನು. ಆದರೆ ನಾನೊಬ್ಬ ದುಷ್ಟ ಅನ್ನುವುದು ಸುಳ್ಳಾಗುತ್ತದೋ?

ನನಗೆ ಸಾಲ ಕೊಟ್ಟ ಆತ್ಮೀಯರ ಮನೆಯಲ್ಲಿ, ಕೊಟ್ಟ ಸಾಲದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಗೊತ್ತಿದೆ. ಆದರೆ ಅವರು "ನಾನು ಕೊಟ್ಟ ಸಾಲದ ಹಣ ನನಗೆ ಮರಳಿ ಸಿಕ್ಕಿದೆ" ಎಂದು ಸುಳ್ಳು ಹೇಳಿ ಅವರ ಮನೆಯ ಜನರ ಮುಂದೆ ನನ್ನನ್ನೊಬ್ಬ ಒಳ್ಳೆಯ ವ್ಯಕ್ತಿಯ ಹಾಗೆ ಬಿಂಬಿಸಿದ್ದಾರೆ. ಇದನ್ನು ಅವರ ಒಳ್ಳೆಯತನ ಎನ್ನಲೆ? ಹೌದು, ನನ್ನ ಮಟ್ಟಿಗಂತೂ ಅದು ಒಳ್ಳೆಯತನ. ಆದರೆ ಅವರ ಮನೆಯವರ ವಿಷಯದಲ್ಲಿ? ನಾಳೆ ಅವರ ಮನೆಯವರಿಗೆ "ಕೊಟ್ಟ ಸಾಲದ ಹಣ ವಾಪಸ್ಸಾಗಿಯೇ ಇಲ್ಲ" ಎನ್ನುವುದು ಗೊತ್ತಾದರೆ? ಆಗ ಆ ಆತ್ಮೀಯ ವ್ಯಕ್ತಿ, ಅವರ ಮನೆಯಲ್ಲಿಯೇ ಒಬ್ಬ ಸುಳ್ಳುಗಾರನಾಗುವುದಿಲ್ಲವೆ? ಅಂದರೆ, ಒಬ್ಬ ವ್ಯಕ್ತಿ ನನಗೆ ಒಳ್ಳೆಯದನ್ನು ಮಾಡಿದಾಗಲೂ ಕೂಡ, ಇನ್ನೊಬ್ಬರ ದೃಷ್ಟಿಯಲ್ಲಿ ಆತ ಕೆಟ್ಟವನೇ ಆಗುವ ಸಾಧ್ಯತೆಗಳಿವೆ ಎಂದಾಯಿತಲ್ಲ. ಏಕೆ ಹೀಗೆ?

ಒಬ್ಬ ವ್ಯಕ್ತಿಗೆ ಒಳ್ಳೆಯದನ್ನೇ ಮಾಡಿದ್ದೇನೆ ಅಂದುಕೊಳ್ಳಿ. ನಾನು ಮಾಡಿದ ಆ ಕೆಲಸ ಆ ವ್ಯಕ್ತಿಯ ಒಳಿತಿಗಾಗಿ ಎಂದೇ ಮನಸಾರೆ ನಂಬಿರುತ್ತೇನೆ. ಆದರೆ ಆ ವ್ಯಕ್ತಿಯ ಮನೆಯವರಿಗೆ ನಾನು ಮಾಡಿದ ಆ ಕೆಲಸ ಇಷ್ಟವೇ ಆಗಲಿಲ್ಲ ಅಂದರೆ? ನನ್ನ intent ಏನೋ ಒಳ್ಳೆಯದೇ ಆಗಿತ್ತು. ಆದರೆ ನಾನು ಮಾಡಿದ ಕೆಲಸ ಮಾತ್ರ ಅವರಿಗೆ ಸರಿ ಎಂದು ತೋಚಲಿಲ್ಲ. ಇಂತಹ ಒಂದು ಪರಿಸ್ಥಿತಿಯಲ್ಲಿ ಒಳ್ಳೇತನ ಯಾವುದು? ದುಷ್ಟತನ ಯಾವುದು ಎಂಬ ಪ್ರಶ್ನೆಗಳು ಮೂಡುತ್ತವೆ.

"ಸಂತೋಷ-ದು:ಖ", "ಒಳ್ಳೇತನ-ದುಷ್ಟತನ" ಇವ್ಯಾವುದೂ universal ಅಲ್ಲವೇ? ಹಾಗಾದರೆ ಮುಂದೇನು?

ಪ್ರಶ್ನೆಗಳ ಸರಮಾಲೆಗಳು. ಉತ್ತರ ಕಂಡುಹಿಡಿಯಬೇಕಾಗಿದೆ. ಬೆಳೆಯಬೇಕಾಗಿದೆ.

2 comments:

Jayalaxmi said...

ತುಂಬಾ ಆಪ್ತವಾಗುವ ಲೇಖನ ಅವಿನಾಶ್.
ಸಂತೋಷ-ದುಃಖ, ಒಳ್ಳೇದು-ಕೆಟ್ಟದ್ದು ಒಂದೇ ನಾಣ್ಯದ ಎರಡು ಮುಖಗಳು, ಇದು ನಿಮಗೂ ಗೊತ್ತು. ನಿಮ್ಮ ಮನದ ಈ ಮಂಥನದಲ್ಲಿ ಅಮೃತ ನಿಮ್ಮ ಪಾಲಾಗಲಿ ಅನ್ನುವುದು ನನ್ನ ಹಾರೈಕೆ.

ಗೌತಮ್ ಹೆಗಡೆ said...

jayalaxmi avara abhipraayave nannadu..